ಬೆಂಗಳೂರು: ರವಿ ಉದಯಿಸುವ ಮುನ್ನ, ಬೆಳಗಾಗುವ ಮೊದಲು ಪರಮಾತ್ಮನೆದುರು ಎಂ.ಎಸ್. ಸುಬ್ಬುಲಕ್ಷ್ಮೀ ಹೇಳಿರುವ ಸುಪ್ರಭಾತವನ್ನ ತಪ್ಪದೆ ಪಠಿಸಿದ ನಂತರವೇ ಹಲವರ ದಿನ ಪ್ರಾರಂಭವಾಗುತ್ತೆ. ಆದ್ರಿಲ್ಲೋಬ್ಬರಿದ್ದಾರೆ! ಇದಕ್ಕೆ ಸ್ವಲ್ಪ ವಿರುದ್ದ, ರಾತ್ರಿ ಇನ್ನೇನೂ ಊಟ ಮುಗಿಸಿ ಮಲಗಬೇಕು ಅನ್ನೋ ಸಮಯಕ್ಕೆ “ರವಿ ಬೆಳಗೆರೆ” ಉದಯಸ್ತಿದ್ರು,ಈ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ಕ್ರೈಮ್ ಡೈರಿಯ ರೂಪದಲ್ಲಿ ಎಲ್ಲರ ಮನೆಯಲ್ಲೂ 10.30ಕ್ಕೆ ಪ್ರತ್ಯಕ್ಷವಾಗೋರು.ದೇಶ ,ರಾಜ್ಯ ಕಂಡಂತಹ ಭೂಗತ ಲೋಕದ ಪಾತಕಿಗಳ ಬದುಕಿನ ಪರಿಚಯ, ಸಾಮಾನ್ಯನಿಗೆ ತಿಳಿಯದ, ಯಾರೂ ಕಂಡಿರದ ರೋಚಕ ಕಥೆಯ ಜೊತೆಗೆ ವ್ಯಥೆಯನ್ನ, ಪರಿ ಪರಿಯಾಗಿ ಮನ ಮುಟ್ಟುವಂತೆ,ತಮ್ಮ ಕಂಚಿನ ಕಂಠದಿಂದ, ದಿಟ್ಟ ,ಧೃಢ ನಿರೂಪಣೆಯಿ0ದ ಪ್ರಸ್ತುತ ಪಡುಸ್ತಿದ್ರು. ಹಾಯ ಬೆಂಗಳೂರಿನ್ ವ್ಯವಸ್ಥಾಪಕ, ಸಂಸ್ಥಾಪಕ ಹಾಗೂ ಮುಖ್ಯ ಸಂಪಾದಕರು ಆಗಿದ್ದ ರವಿ ಬೆಳಗೆರೆಯವರು ಒಂದು ರೀತಿಯಲ್ಲಿ ಯಾವ ಸ್ಟಾರ್ಗೂ ಕಡಿಮೆ ಇರದ ಖ್ಯಾತಿ ಹೊಂದಿದ್ದ ಪತ್ರಕರ್ತ ಹಾಗು ಬರಹಗಾರ. ತಮ್ಮ ತೀಕ್ಷಣವಾದ, ಕಟುವಾದ ಟೀಕಾಪ್ರಹಾರದ ಬರವಣಿಗೆಯಿಂದ ವ್ಯವಸ್ಥೆಯನ್ನ, ಆಶಾಡಭೂತಿಗಳನ್ನ ಲೇವಡಿ ಮಾಡುವುದರ ಜೊತೆಗೆ ಸತ್ಯವನ್ನು ಮರೆಮಾಚದೆ ಯಥಾವತ್ತಾಗಿ ವಿಷಯ ಪ್ರಕಟಿಸ್ತಿದ್ರು.
ರವಿ ಬೆಳಗೆರೆ ದೈಹಿಕವಾಗಿ ನಮ್ಮನ್ನು ಅಗಲಿ ತಿಂಗಳುಗಳಾದರು ಇಂದುಗೂ ಎಂದೆಂದಿಗೂ ಅವರ ಬರವಣಿಗೆಯಿಂದ ಸದಾ ಓದುಗರ ಮನಸ್ಸಿನಲ್ಲಿ ಚಿರಸ್ಥಾಯಿ. ಕಳೆದ ಭಾನುವಾರದಂದು ಅವರೇ ಕಟ್ಟಿದ ಸಂಸ್ಥೆಯಾದ ಪ್ರಾರ್ಥನಾ ಶಾಲೆಯ ಆವರಣದಲ್ಲಿ ಆರು ಪುಸ್ತಕಗಳು ಬಿಡುಗಡೆಗೊಂಡವು. ಅವ್ರು ಬದುಕಿಗೆ ವಿದಾಯ ಹೇಳುವ ಮುನ್ನ ರಚಿಸಿದ ಪುಸ್ತಕಗಳನ್ನ, ಅಕ್ಷರ ಪರಂಪರೆಗೆ ಕೊಡುಗೆಯಾಗಿ ಬಿಟ್ಟು ಹೋದ “ಅಮ್ಮಾ ನೀನು ನನ್ನ ಯಾಕೆ ಕೊಂದೆ, ದ ಗಿಫ್ಟ್, ರೇಖಾ, ಅಭಿನಂದನ, ಹಿಮಗಿರಿಯ ಗರ್ಭದಲ್ಲಿ, ಬೆಸ್ಟ್ ಆಫ್ ಲವ ಲವಿಕೆ” ಈ 6 ಪುಸ್ತಕಗಳನ್ನ ಅವರ ಮಕ್ಕಳುಗಳು ಪ್ರಕಟಿಸಿ, ಲೋಕಾರ್ಪಣೆಗೊಳಿಸುವ ಹೊಣೆ ತೆಗೆದುಕೊಂಡರು.
ರವಿ ಬೆಳಗೆರೆಯ ಪರಮ ಆಪ್ತರುಗಳಾದ ನಾಗತಿಹಳ್ಳಿ ಚಂದ್ರಶೇಖರ್, ಜೋಗಿ, ಸುರೇಶ್ ಶೆಟ್ಟರು, ರೇವಣ ಸಿದೇಶ್ವರ ಹಾಗೂ ಹಿರಿಯ ಪತ್ರಕರ್ತೆ ವಿಜಯಮ್ಮ ಅವರು ಕಾರ್ಯಕ್ರಮದಲ್ಲಿ ಹಾಜರಾಗಿ ಪುಸ್ತಕವನ್ನು ಸಹ ಬಿಡುಗಡೆ ಮಾಡಿದ್ರು.
ಗಾಯಕಿ ಬಿ.ಆರ್ ಚಾಯಾ ತಮ್ಮ ಹಾಡುಗಳ ಮೂಲಕ ಅಣ್ಣನಂತೆ ಇದ್ದ ಬೆಳಗೆರೆಯನ್ನ ಸ್ಮರಸಿಕೊಂಡ್ರು, ಇನ್ನು ವೇದಿಕೆಯ ಮೇಲೆ ಅಸೀನರಾಗಿದ್ದ ಉಳಿದ ಅಥಿತಿಗಳು ತಮ್ಮ ಮಾತಿನಿಂದ ಬೆಳಗೆರೆಯ ಗುಣಗಾಣ ಮಾಡಿದ್ರು.
ನಾಗತಿಹಳ್ಳಿ ಮತ್ತು ಜೋಗಿಯವರು ರವಿ ಅವರ ಜೊತೆಗಿನ ಒಡನಾಟ, ಪತ್ರಿಕಾ ಜಗತ್ತಿನಲ್ಲಿ ಹೊಸ ಲಹರಿ ತರಲು ಅವರು ಪಟ್ಟ ರಾಕ್ಷಸ ಪ್ರಯತ್ನ, ಸಾಹಸ ಶೀಲತೆ,ಹಾಸ್ಯ ,ವ್ಯಂಗ್ಯ ಮನೋಭಾವ ಓದುಗನಿಗೆ ನಿಕಟವಾಗಿ ವರದಿ ತಲುಪಿಸಲು ಖುದ್ದು ಅವ್ರೇ ದೇಶದ ಮೂಲೆ ಮೂಲೆಗೆ(ಅಸ್ಸಾಮ್, ಕಾಶ್ಮೀರ, ಹಿಮಾಚಲ ಪ್ರದೇಶ) ಹೋಗಿ ಅನುಭವ ಪಡೆದು ನಂತರ ತಾನು ಪಟ್ಟ ಪಾಡನ್ನು ಸೇರಿಸಿ ಇಂಕಿಸುವ ಪರಿ “ನ ಭೂತೋ ನ ಭವಿಷ್ಯತಿ” ಎಂದ್ರು.
ಇನ್ನು ವಿಜಯಮ್ಮ ರವಿಯವರನ್ನು ನೆನೆಯುತ್ತ ಕೊಂಚ ಭಾವುಕರಾಗಿ, ಅವರ ಕಷ್ಟದ ದಿನಗಳಲ್ಲಿ ಹೇಗೆ ಶ್ರಮಿಸಿ ಓರ್ವ ಪ್ರಭಾವಿ ಪತ್ರಕರ್ತನಾಗಿ ಉತ್ತುಂಗ ತಲುಪಿಲು ಸಾಧ್ಯವಾದ ಸಂಗತಿಯನ್ನ ವಿವರಿಸಿದ್ರು. ರವಿ ಓಬ್ಬ ಒಳ್ಳೆ ಬರಹಗಾರನಾಗಿ ಎಷ್ಟು ಎಲ್ಲರಿಗೂ ಹಿಡುಸುತ್ತಾನೆಯೋ ಅದಕ್ಕೂ ಮೀರಿದ ಒಳ್ಳೆ ವ್ಯಕ್ತಿತ್ವ ಅವನಲ್ಲಿತ್ತು, ನನ್ನ ಮಗನಾಗಿದ್ದ, ಮಗನ ಬಳಿ ಚರ್ಚಿಸಲಾಗದ ಹಲವು ವಿಷಯಗಳನ್ನ ಅವನ ಬಳಿ ಹೇಳ್ಕೊಂಡ್ತಿದ್ದೆ, ಅದಕ್ಕೆ ಪರಿಹಾರ ಕೂಡ ಒಡಗುಸ್ತಿದ್ದ, ಸಹಾಯ ಹಸ್ತ ಚಾಚುವಲ್ಲಿ ಎಂದು ಹಿಂದೇಟಾಕದ ವ್ಯಕ್ತಿತ್ವ ಅವನದು ಎಂದು ಹೇಳಿದ್ರು .
ವ್ಯಕ್ತಿಯೊಬ್ಬ ಅಗಲಿದ್ರೆ ಅವನ ಪಾರ್ಥಿವ ಶರೀರ ಹೊರಲು 4 ಮಂದಿ ಅಗತ್ಯ , ಅದೇ ಒಬ್ಬ ವ್ಯಕ್ತಿಯನ್ನ ಸಮಾಜದಲ್ಲಿನ ಜನ ಮನಸಿನಲ್ಲಿ ಸದಾ ಕಾಲ ಹೊತ್ತು ಮೆರೆಯಲು ಅವನ ವ್ಯಕ್ತಿತ್ವ ಅಪಾರವಾಗಿರಬೇಕು ಆ ಸಾಲಿಗೆ ರವಿ ಬೆಳಗೆರೆ ಖಂಡಿತವಾಗಿಯೂ ಸೇರುತ್ತಾರೆ..
ವರದಿ: P. ಘನಶ್ಯಾಮ್ – ಬೆಂಗಳೂರು