ಹಾನಗಲ್: ಹಾನಗಲ್ ನ ನರೇಗಲ್ ನಲ್ಲಿ ಡಿ.ಕೆ. ಶಿವಕುಮಾರ್ ಅವರ ಪ್ರಚಾರ ಭಾಷಣದ ಸಾರಾಂಶ.
ಈ ಚುನಾವಣೆಯನ್ನು ನಾವು ನಮ್ಮ ಪಕ್ಷದ ನೀತಿ ಹಾಗೂ ಕಾರ್ಯಕ್ರಮಗಳ ಆಧಾರದ ಮೇಲೆ ಎದುರಿಸುತ್ತಿದ್ದೇವೆ. ಜನರಿಗೆ ಯಾರು ಸಹಾಯ ಮಾಡಿದ್ದಾರೆ ಎಂಬುದು ಇಲ್ಲಿ ಚರ್ಚೆ ಆಗಬೇಕಾದ ಮುಖ್ಯ ಅಂಶ.
ನಿನ್ನೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಿದ್ದರಾಮಯ್ಯ ಸರ್ಕಾರ ಏನು ಮಾಡಿದೆ ಕೇಳಿ ಎಂದು ಹೇಳಿದ್ದಾರೆ. ನಮ್ಮ ಮನೋಹರ್ ತಹಶೀಲ್ದಾರ್ ಅವರು ಶಾಸಕರಾಗಿದ್ದಾಗ ಈ ಪಂಚಾಯ್ತಿ ವ್ಯಾಪ್ತಿಯ ಅಭಿವೃದ್ಧಿ ಯೋಜನೆಗಳಿಗೆ 2.30 ಕೋಟಿ ರು. ಖರ್ಚು ಮಾಡಿರುವ ಪಟ್ಟಿ ಇದೆ.
ಸಿದ್ದರಾಮಯ್ಯ ಅವರು ಏನು ಮಾಡಿದರು ಎಂದು ಕೇಳುವುದಕ್ಕಿಂತ, ಎಲ್ಲ ಅಧಿಕಾರ ಹಾಗೂ ದಾಖಲೆಗಳನ್ನು ಹೊಂದಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಐದು ವರ್ಷಗಳ ಕಾಂಗ್ರೆಸ್ ಸರ್ಕಾರ ಈ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಏನು? ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಸರ್ಕಾರ ನೀಡಿರುವ ಕೊಡುಗೆ ಏನು ಎಂಬುದನ್ನು ಜನರ ಮುಂದಿಡಿ. ಆಗ ಚರ್ಚೆ ಮಾಡೋಣ. ಈ ಸವಾಲು ಸ್ವೀಕರಿಸಲು ನಾವು ಸಿದ್ಧ.
ಈ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಡಬಲ್ ಇಂಜಿನ್ ಸರ್ಕಾರ ಮಾಡಿ ಎಂದು ಕೇಳಿಕೊಂಡಿದ್ದರು. ಜನರೂ ಅವರಿಗೆ ಮತ ಕೊಟ್ಟಿದ್ದಾರೆ. ಇಲ್ಲಿರುವ ನೀವೇಲ್ಲರೂ ರೈತರಿದ್ದೀರಿ. ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪನವರು ತಾವು ಅಧಿಕಾರಕ್ಕೆ ಬಂದರೆ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ನಿಮ್ಮ ಆದಾಯ ಡಬಲ್ ಆಗಿದೆಯಾ? ನಿಮ್ಮ ಜಿಲ್ಲೆಯವರೇ ಕೃಷಿ ಸಚಿವರು. ನಿಮ್ಮ ಬೆಳೆಗೆ ನೀಡುವ ಬೆಲೆ ಡಬಲ್ ಆಗಿದೆಯಾ? ಗೊಬ್ಬರ ಬೆಲೆ ಕಡಿಮೆ ಆಗಿದೆಯಾ? ನರೇಗಾ ಕೂಲಿ ಹೆಚ್ಚಾಗಿದೆಯಾ? ಯಾವುದೂ ಇಲ್ಲ.
ಬೊಮ್ಮಾಯಿ ಅವರು ಕಾಲ್ ಸೆಂಟರ್ ತೆರೆಸಿದ್ದು, ಬಿಜೆಪಿ ನಿಮಗೆ ಅಡುಗೆ ಸಿಲಿಂಡರ್ ಕೊಟ್ಟಿದೆ, ಹೀಗಾಗಿ ನೀವು ಬಿಜೆಪಿಗೆ ವೋಟ್ ಹಾಕಿ ಎಂದು ಫೋನ್ ಮಾಡಿಸಿ ಹೇಳಿಸುತ್ತಿದ್ದಾರೆ. ಅದಕ್ಕೆ ಇಲ್ಲಿನ ಜನ, ಸಿದ್ದರಾಮಯ್ಯನವರು ಉಚಿತವಾಗಿ ಅಕ್ಕಿ ಕೊಟ್ಟಿದ್ದಾರೆ, ಅವರಿಗೆ ನಾವು ಏನು ಮಾಡಬೇಕು ಎಂದು ಮರುಪ್ರಶ್ನಿಸುತ್ತಿದ್ದಾರೆ. ನಾವು ಕಾಂಗ್ರೆಸ್ ಕೊಟ್ಟ ಅಕ್ಕಿಯನ್ನು ನಿತ್ಯ ಊಟ ಮಾಡುತ್ತಿದ್ದು, ನಾವು ಕಾಂಗ್ರೆಸ್ ಗೇ ಮತ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ.
ಜನರಿಗೆ ಅಚ್ಛೇ ದಿನ ಕೊಡುತ್ತೇವೆ ಎಂದು ಬಿಜೆಪಿ ಹೇಳಿತ್ತು. ನಾವು ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಡೀಸೆಲ್ ಬೆಲೆಯನ್ನು 50 ರೂ. ಒಳಗೆ ಇಡುತ್ತೇವೆ ಎಂದಿದ್ದರು. 2013 ರಲ್ಲಿ 50 ರು. ಇದ್ದ ಪೆಟ್ರೋಲ್ ಈಗ 110 ರು. ಆಗಿದೆ. ಇದು ಅಚ್ಛೇ ದಿನನಾ? 2014ರಲ್ಲಿ ಅಡುಗೆ ಅನಿಲದ ಸಿಲಿಂಡರ್ 410 ರು. ಇತ್ತು. ಈಗ ಅದು 980 ರು. ಆಗಿದೆ. ಇದು ಅಚ್ಛೇ ದಿನಾನ? ಅಡುಗೆ ಎಣ್ಣೆ 99 ರು. ಇತ್ತು. ಈಗ 200 ರು. ಆಗಿದೆ. ಮೋದಿ ಅವರು ಹೇಳಿದಂತೆ ಪಕೋಡಾ ಮಾರುವುದಾದರೂ ಹೇಗೆ? ಇದು ಈ ಚುನಾವಣೆಯ ಪ್ರಶ್ನೆ.
ಜನರ ಖಾತೆಗೆ ನೇರವಾಗಿ ಹಣ ಹಾಕುತ್ತೇನೆ ಎಂದಿದ್ದರು ಯಾರ ಖಾತೆಗಾದರೂ 15 ಲಕ್ಷ ರು. ಹಣ ಹಾಕಿದರಾ? ಕೋವಿಡ್ ಸಂದರ್ಭದಲ್ಲಿ 15 ಸಾವಿರ ಆದರೂ ಹಾಕಿದರಾ?
ನಾನು ಇಲ್ಲಿಗೆ ಬರುವಾಗ ಕೆಲವರನ್ನು ಮಾತನಾಡಿಸಿದೆ. ಕೋವಿಡ್ ನಂತರ ಅನೇಕರು ತಮ್ಮ ಊರಿಗೆ ಮರಳಿದ್ದಾರೆ. ನೀವು ಹೇಗೆ ವಾಪಸ್ ಬಂದಿರಿ ಎಂದು ಕೇಳಿದೆ. ಅದಕ್ಕೆ ಆ ವ್ಯಕ್ತಿ, ನೀವು ಮತ್ತು ಸಿದ್ರಾಮಣ್ಣ ಸರ್ಕಾರಕ್ಕೆ 1 ಕೋಟಿ ರು. ಚೆಕ್ ಕೊಡಲು ಹೋದಾಗ ಸರ್ಕಾರ ಉಚಿತವಾಗಿ ಬಸ್ ವ್ಯವಸ್ಥೆ ಮಾಡಿದರಲ್ಲಾ ಆಗ ಬಂದೆ ಎಂದು ಹೇಳಿದ. ಇಂತಹ ಒಂದು ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆಯಾ?
ಜನರೇ ನಮ್ಮ ಅಭ್ಯರ್ಥಿಯನ್ನು ಆಪದ್ಭಾಂದವ ಎಂದು ಕರೆಯುತ್ತಿದ್ದಾರೆ. ಯಾಕೆಂದರೆ, ಕೋವಿಡ್ ಸಮಯದಲ್ಲಿ ವೃತ್ತಿ ಕಳೆದುಕೊಂಡವರಿಗೆ ಶ್ರೀನಿವಾಸ ಮಾನೆ ಅವರು ತಲಾ 2 ಸಾವಿರ ರು. ಚೆಕ್ ಕೊಟ್ಟಿದ್ದಾರೆ. ಸರ್ಕಾರ ಮಾಡಲು ಸಾಧ್ಯವಾಗದ ಕೆಲಸವನ್ನು ನಮ್ಮ ಅಭ್ಯರ್ಥಿ ಮಾಡಿದ್ದಾರೆ. ಜನರ ಕಷ್ಟಕ್ಕೆ ಇವರು ಆಗುತ್ತಾರೆ. ಇವರು ಇಲ್ಲೇ ಇದ್ದು, ಜನರ ಸೇವೆ ಮಾಡುತ್ತಾರೆ ಎಂಬ ನಂಬಿಕೆಯಿಂದ ಜನ ಪಕ್ಷಬೇಧ ಮರೆತು ಬೆಂಬಲ ನೀಡುತ್ತಿದ್ದಾರೆ.
ನಿಮ್ಮ ಕಷ್ಟಕಾಲದಲ್ಲಿ ನೆರವಾದವರಿಗೆ ಮತ ಹಾಕುತ್ತೀರೋ ಇಲ್ಲವೋ? ನಮ್ಮ ಹಳ್ಳಿ ಜನ ಉಪಕಾರ ಸ್ಮರಣೆ ಇಟ್ಟುಕೊಂಡಿರುತ್ತಾರೆ. ಮಾನೆ ಅವರು ಚುನಾವಣೆಯಲ್ಲಿ ಸೋತ ನಂತರವೂ ಅಧಿಕಾರ ಇಲ್ಲದಿದ್ದರೂ ನಿಮ್ಮ ಜತೆ ಇದ್ದಾರೋ ಇಲ್ಲವೋ? ಕೋವಿಡ್ ಸಮಯದಲ್ಲಿ ಬಿಜೆಪಿ ನಾಯಕರು ನಿಮಗೆ ಸಹಾಯ ಮಾಡಿದರಾ? ಇಲ್ಲ.
ಬೊಮ್ಮಾಯಿ ಅವರ ಸರ್ಕಾರದಲ್ಲಿ ಎಂತಹ ಕಾನೂನು ಇದೆ ಎಂದರೆ, ಅವರು ಇಂತಹ ಮಟ್ಟಕ್ಕೆ ಇಳಿಯುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಬಿಜೆಪಿಯವರಿಗೆ ಪೊಲೀಸ್ ಇಲಾಖೆಯೇ ಬೇಡವಾಗಿದೆ. ಅವರದೇ ಆದ ನೈತಿಕ ಪೊಲೀಸ್ ಗಿರಿಯನ್ನು ಮುಖ್ಯಮಂತ್ರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹೊಸದಾಗಿ ಗೃಹ ಸಚಿವರಾಗಿರುವ ಆರಗ ಜಾನೇಂದ್ರ ಅಲ್ಲ, ಅಜ್ಞಾನೇಂದ್ರ. ನಮ್ಮ ಪಕ್ಷದ ಬಟ್ಟೆ ಹಾಕಿಕೊಂಡರೆ ಏನು ತಪ್ಪು ಎಂದು ಕೇಳುತ್ತಿದ್ದಾರೆ. ಈ ಚುನಾವಣೆ ಮುಗಿಯಲಿ 2 ಜಿಲ್ಲೆಗಳಿಗೆ ಹೋಗಿ, ಸಂವಿಧಾನದ ಪ್ರತಿ, ರಾಷ್ಟ್ರಧ್ವಜ, ಪೊಲೀಸ್ ಖಾಕಿ ಸಮವಸ್ತ್ರ, ಪೊಲೀಸ್ ಮ್ಯಾನುಯೆಲ್ ಪ್ರತಿಯನ್ನು ಉಡುಗೊರೆಯಾಗಿ ನೀಡುತ್ತೇನೆ. ಅದಕ್ಕೂ ಮುನ್ನ ನೀವು ಹಸ್ತದ ಗುರುತಿಗೆ ಮತಹಾಕಿ ಮಾನೆ ಅವರನ್ನು ವಿಧಾನಸೌಧದಲ್ಲಿ ಕೂರಿಸಬೇಕು.
ನಾವು ಎಲ್ಲ ಜಾತಿ, ಧರ್ಮ, ನೀತಿ ಬಗ್ಗೆ ಗೌರವ ಇಟ್ಟುಕೊಂಡಿದ್ದೇವೆ. ನಾವು ನಿಮ್ಮ ಸೇವೆಗೆ ಬದ್ಧರಾಗಿದ್ದು, ಮಾನೆಯವರ ಜತೆ ಇದ್ದೇವೆ ಎಂದು ಹೇಳಲು ಬಂದಿದ್ದೇವೆ. ನಾವು ಇಲ್ಲಿಗೆ ನಾಯಕರಾಗಿ ಬಂದಿಲ್ಲ. ನಿಮ್ಮ ಸೇವಕರಾಗಿ ಬಂದಿದ್ದೇವೆ.
ಈ ಚುನಾವಣೆಯಲ್ಲಿ ಮಾನೆ ಸಾಹೇಬರೇ ಗೆಲ್ಲುತ್ತಾರೆ ಎಂದು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಈ ಚುನಾವಣೆ ಫಲಿತಾಂಶ ನನ್ನ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳು ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ. ಅವರಿಗೆ ಧೈರ್ಯ ಇದ್ದಿದ್ದರೆ ಈ ಸೋಲು ನನ್ನ ಜವಾಬ್ದಾರಿ ಎಂದು ಹೇಳಬೇಕಿತ್ತು. ಆದರೆ ಅದನ್ನು ಹೇಳುತ್ತಿಲ್ಲ.
ರಾಜ್ಯದಲ್ಲಿ ಎರಡು ವರ್ಷದ ಬಿಜೆಪಿ ಆಡಳಿತ ಎಲ್ಲ ರೀತಿಯಲ್ಲೂ ವಿಫಲವಾಗಿದೆ. 25 ಸಂಸದರನ್ನು ಇಟ್ಟುಕೊಂಡು ಅವರ ಮೂಲಕ ಕೇಂದ್ರಕ್ಕೆ ಮನವಿ ಮಾಡಿ ರಾಜ್ಯಕ್ಕೆ ಹೆಚ್ಚಿನ ಅನುದಾನ ತರಲಿಲ್ಲ. ಬರುವ ಹಣಕಾಸು ಬಂದಿಲ್ಲ. ಕೇಂದ್ರ ಸರ್ಕಾರದಲ್ಲಿ ರಾಜ್ಯದಿಂದ ಆಯ್ಕೆಯಾದವರೇ, ರಸಗೊಬ್ಬರ, ಕಲ್ಲಿದ್ದಲು ಹಾಗೂ ಹಣಕಾಸು ಸಚಿವರಾಗಿದ್ದಾರೆ. ಆದರೂ ರಾಜ್ಯದಲ್ಲಿ ಗೊಬ್ಬರ ಬೆಲೆ ಹೆಚ್ಚಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಕಲ್ಲಿದ್ದಲು ಕೊರತೆಯಿಂದ ಕರ್ನಾಟಕ ಕತ್ತಲಲ್ಲಿ ಮುಳುಗುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯಕ್ಕೆ ಬರಬೇಕಾದ ಹಣ ಬಂದಿಲ್ಲ. ಹೀಗಿರುವಾಗ ನೀವು ಅವರಿಗೆ ಮತ ನೀಡಬೇಕಾ ಬೇಡವಾ? ಎಂದು ನೀವೇ ನಿರ್ಧರಿಸಿ. ಮಾನೆ ಅವರಿಗೆ ನಿಮ್ಮ ಮತ ನೀಡಿ, ನಮಗೆ ಶಕ್ತಿ ತುಂಬಿ ಎಂದು ಮನವಿ ಮಾಡಿಕೊಳ್ಳುತ್ತೇನೆ.
ವರದಿ: ಸಿಸಿಲ್ ಸೋಮನ್
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
Telkom University
20/10/2023 at 11:31
What were the key points or highlights of Dr. K. Shivakumar’s campaign speech in Hanagal?
Teknik Informatika
20/01/2024 at 11:15
In the recent elections, what has the BJP leadership been claiming regarding the victory? How have the Chief Ministers responded to the election results, and what stance have they taken regarding the outcome’s impact on their government?
Visit us telkom university