ಬೆಂಗಳೂರು : ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನೆಗಳು – ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನೆಗಳು. ನಮ್ಮ ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳೆನ್ನದೆ ಶ್ರಮಿಸಿದ ಕಾರ್ಯಕರ್ತರಿಗೆ ಹಾಗೂ ಮತ ನೀಡಿ, ಆಶೀರ್ವದಿಸಿದ ಮತದಾರರಿಗೆ ಧನ್ಯವಾದಗಳು.
ಗ್ರಾಮಗಳ ಪ್ರಗತಿಯಲ್ಲಿ ದೇಶದ ಉನ್ನತಿ ಅಡಗಿದೆ. ಈ ಕಾರಣಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ಜಯಗಳಿಸಿದ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ತಮ್ಮ ಗ್ರಾಮವನ್ನು ಸದೃಢಗೊಳಿಸುವ ಕಾರ್ಯದಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಬೇಕೆಂಬುದು ನನ್ನ ಸಲಹೆ.
ಇನ್ನೂ ಹಲವು ಜಿಲ್ಲೆಗಳಲ್ಲಿ ಮತ ಎಣಿಕೆ ಕಾರ್ಯ ಪೂರ್ಣಗೊಂಡು ಫಲಿತಾಂಶ ಹೊರಬಂದಿಲ್ಲ, ಮೀಸಲಾತಿ ಅಡಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಹಂಚಿಕೆಯಾಗಿಲ್ಲ, ಆಗಲೇ ಯಡಿಯೂರಪ್ಪ ಅವರು ನಮ್ಮ ಪಕ್ಷ 3800ಕ್ಕೂ ಅಧಿಕ ಪಂಚಾಯತಿಗಳಲ್ಲಿ ಗೆದ್ದಿದೆ ಎಂದು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ.
ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಯಡಿಯೂರಪ್ಪನವರು ಬಿಜೆಪಿ 60% ಪಂಚಾಯತಿಗಳಲ್ಲಿ ಗೆದ್ದಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಗೆದ್ದ ಹೆಚ್ಚಿನ ಸಂಖ್ಯೆಯ ಪಂಚಾಯತಿ ಸದಸ್ಯರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ.
ಯಡಿಯೂರಪ್ಪನವರ ಮುಖ್ಯಮಂತ್ರಿ ಕುರ್ಚಿಯೇ ಅಲ್ಲಾಡ್ತಿದೆ, ಅದರ ನಡುವೆಯೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಹಗಲುಗನಸು ಕಾಣ್ತಿದ್ದಾರೆ. ಒಂದು ವೇಳೆ ನಾಳೆಯೇ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ಇದು ನೂರಕ್ಕೆ ನೂರು ಸತ್ಯ.
ಬ್ರಿಟನ್ ನಿಂದ ರಾಜ್ಯಕ್ಕೆ ಬಂದವರನ್ನು ವಿಮಾನ ನಿಲ್ದಾಣದಲ್ಲಿ ಸೂಕ್ತ ಪರೀಕ್ಷೆಗೆ ಒಳಪಡಿಸದಿರುವುದು ದೊಡ್ಡ ತಪ್ಪು. ಈಗ ಬ್ರಿಟನ್ ನಿಂದ ಬಂದವರು ತಲೆಮರೆಸಿಕೊಂಡಿದ್ದಾರೆ, ಪ್ರಯಾಣಿಕರ ವಿಳಾಸ ಸಿಗ್ತಿಲ್ಲ ಅಂದರೆ ಅದು ಸರ್ಕಾರದ ಬೇಜವಾಬ್ದಾರಿಯನ್ನು ತೋರಿಸುತ್ತೆ. ಸರ್ಕಾರ ಕಳೆದ ಬಾರಿ ಮಾಡಿದ್ದ ತಪ್ಪನ್ನೆ ಮತ್ತೆ ಮಾಡುತ್ತಿದೆ.

ವರದಿ: ಸಿಸಿಲ್ ಸೋಮನ್
