ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರು ಹಿರಿಯ ಸಾಹಿತಿ, ಸಮಾಜ ಸೇವಕಿ ಎ.ಪಂಕಜ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರು ಹಿರಿಯ ಸಾಹಿತಿ, ಸಮಾಜ ಸೇವಕಿ ಎ.ಪಂಕಜ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲಿ 50ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದ ಅವರು, ತೆಲುಗು, ಹಿಂದಿ, ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದರು. ಮಹಿಳಾ ಸಹಕಾರ ಬ್ಯಾಂಕ್ ಸಂಸ್ಥಾಪಕರಾಗಿ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದರು.
ಅವರ ನಿಧನದಿಂದ ಬಹುಮುಖಿ ಪ್ರತಿಭೆಯೊಂದನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟಂಬದವರಿಗೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಎ. ಪಂಕಜ ಅವರು ತುಮಕೂರು ಜಿಲ್ಲೆಯ ಪಾವಗಡದಲ್ಲಿ 1932 ರ ಏಪ್ರಿಲ್ 20ರಂದು ಜನಿಸಿದರು. ತಮ್ಮ ಶಾಲಾ ಕಾಲೇಜು ದಿನಗಳಲ್ಲಿ ಆಶುಭಾಷಣ, ಚರ್ಚಾಕೂಟ, ನಾಟಕಗಳಲ್ಲಿ ಅಭಿನಯಿಸಿ ಹಲವಾರು ಬಹುಮಾನ ಪಡೆದಿದ್ದರು. ಓದಿದ್ದು ಇಂಟರ್ ಮೀಡಿಯಟ್ ಆದರೂ ಹಿಂದಿ ಭಾಷೆಯಲ್ಲಿ ವಿದ್ವಾನ್ ಪದವಿ ಪಡೆದಿದ್ದಾರೆ. ಅವರ ಮೊದಲ ಕವನ ‘ಜ್ಯೋತಿ ನಂದಿತು’. ಇಂಗ್ಲಿಷ್, ಹಿಂದಿ, ತೆಲುಗು ಭಾಷೆಯಿಂದ ಕನ್ನಡಕ್ಕೆ ಹಲವಾರು ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಇವರ ಮೊದಲ ಕಥೆ ಪ್ರಕಟವಾದುದು ‘ತಾಯಿನಾಡು’ ಪತ್ರಿಕೆಯಲ್ಲಿ. ನಂತರ ‘ಸೋದರಿ’, ‘ವಿಶ್ವಬಂಧು’ ಮುಂತಾದ ಪತ್ರಿಕೆಗಳಿಗೂ ಬರೆಯತೊಡಗಿದರು. ‘ನಾದಭಂಗ’, ‘ವಿಜಯಗೀತ’, ‘ಸೊಗಸುಗಾತಿ’, ‘ಬಂಗಾರದ ಬಲೆ’, ‘ಕಾಗದದ ದೋಣಿ’, ‘ಬಲಿಪಶು’, ‘ಮಧು’, ‘ನಾಗರ ನೆರಳು’ ಅವರ ಪ್ರಮುಖ ಕಾದಂಬರಿ.
ಆರ್ಥಿಕವಾಗಿ ಹಿಂದುಳಿದಿರುವ, ದುರ್ಬಲ ವರ್ಗದ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹಿಳೆಯರ ಉನ್ನತಿಗಾಗಿ ಬ್ಯಾಂಕೊಂದರ ಅವಶ್ಯಕತೆಯನ್ನೂ ಮನಗಂಡು, ಸ್ಥಾಪಿಸಿದ್ದು ‘ಮಹಿಳಾ ಕೋ ಆಪರೇಟಿವ್ ಬ್ಯಾಂಕ್’. ಬೆಂಗಳೂರು ನಗರದ ಪ್ರಮುಖ ಬಡಾವಣೆಗಳಲ್ಲೊಂದಾದ ಈ ಬ್ಯಾಂಕ್ನಲ್ಲೀಗ ಶೇ. 80 ರಷ್ಟು ಷೇರುದಾರರು ಮಹಿಳೆಯರೇ ಆಗಿದ್ದು ಹೊಲಿಗೆ ಯಂತ್ರ, ಕುಕ್ಕರ್, ಮಕ್ಕಳ ಫೀ, ಮನೆ ರಿಪೇರಿ, ಊದುಬತ್ತಿ ಗೃಹ ಕೈಗಾರಿಕೆ ಮುಂತಾದವುಗಳಿಗೆ ಸಾಲ ಪಡೆದು ಸ್ವಾವಲಂಬಿಗಳಾಗಿ ಬದುಕಲು ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದಾರೆ.
ಅವರ ಸಮಾಜೋಮುಖಿ ಹಾಗೂ ಸಾಹಿತ್ಯ ಕೆಲಸಗಳಿಗಾಗಿ ಸರೋಜ ದೇವಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, ನೇತಾಜಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

ವರದಿ: ಸಿಸಿಲ್ ಸೋಮನ್
